ಜಲಿಯನ್ ವಾಲಾ ಬಾಗ್

ಕೆಲವು ದಿನ ಬ್ಲಾಗ್ ಕಡೆ ತಿರುಗಿ ನೋಡಲು ಆಗಿರಲಿಲ್ಲ. ಮೂರು ಬ್ಲಾಗ್ ಗಳನ್ನುಅನಾಥವಾಗಿ ಬಿಟ್ಟು ಮೂಲೆ ಸೇರಿದ್ದೆ. ಅದಕ್ಕೆ ಕಾರಣವೂ ಇತ್ತು. ತುಂಬಾ ದಿನಗಳಿಂದ ಬರೆಯಲೇಬೇಕು ಎಂದುಕೊಳ್ಳುತ್ತಿದ್ದ ಜಲಿಯನ್ ವಾಲಾ ಬಾಗ್ ಬಗ್ಗೆ ಪುಸ್ತಕ ಬರೆಯಲು ಕೂತಿದ್ದೆ. ಹೀಗಾಗಿ ಉಳಿದೆಲ್ಲಾ ಚಟುವಟಿಕೆಗಳತ್ತ ಗಮನ ಕಡಿಮೆ ಮಾಡಿ, ಕೇವಲ ಪುಸ್ತಕ ಹಾಗೂ ದೈನಂದಿನ ಕಚೇರಿ ಕೆಲಸಗಳ ಬಗ್ಗೆ ಮಾತ್ರ ಗಮನ ಹರಿಸಿದ್ದೆ. ಹೀಗಾಗಿ ಈ ಕಡೆ ಮುಖ ಹಾಕಲು ಆಗಿರಲಿಲ್ಲ. ಈಗ ದಿನಾ ನಿದ್ದೆಗೆಟ್ಟು, ಬೆಳಿಗ್ಗೆ 4.30, 5ಗಂಟೆ ಹೊತ್ತಿಗೆಲ್ಲಾ ಎದ್ದು ತೂಕಡಿಸುತ್ತಾ ತೂಕಡಿಸುತ್ತಾ ಜಲಿಯನ್ ವಾಲಾ ಬಾಗ್ ಪುಸ್ತಕ ಬರೆದು ಮುಗಿಸಿದ್ದೇನೆ. ಮುದ್ರಣಕ್ಕೆ ಹೋಗುವುದು ಬಾಕಿ ಇದೆ. ಮಿತ್ರರಾದ ವೀರಣ್ಣ ಕಮ್ಮಾರ್, ಸಂಡೇ ಇಂಡಿಯನ್ ನ ರಾಘವ ತಪ್ಪುಗಳನ್ನೆಲ್ಲಾ ತಿದ್ದುತ್ತಾ ಕೂತಿದ್ದಾರೆ.
ಇನ್ನು ಚಂದ್ರಯಾನ ಪುಸ್ತಕದ ಮುಖ ಪುಟ ಮಾಡಿಕೊಟ್ಟಿದ್ದ ಮಿತ್ರ ವೀರೇಶ್ ಹೊಗೆಸಪ್ಪಿನವರ್ ಜಲಿಯನ್ ವಾಲಾ ಬಾಗ್ ಪುಸ್ತಕದ ಮುಖ ಪುಟ ರಚಿಸಿಕೊಟ್ಟಿದ್ದಾನೆ. ಅದನ್ನು ನಿಮ್ಮ ಗಮನಕ್ಕಾಗಿ ಇಲ್ಲಿ ಹಾಕಿದ್ದೇನೆ. ನಿಮ್ಮ ಅನಿಸಿಕೆ ತಿಳಿಸಿ.
ಪುಸ್ತಕದ ಮುನ್ನುಡಿ ಬರೆಯಲು ಹಿರಿಯ ಸಾಹಿತಿ, ಜಾನಪದ ತಜ್ಞರಾದ ಶ್ರೀಯುತ ಚಂದ್ರಶೇಖರ ಕಂಬಾರ ಒಪ್ಪಿದ್ದಾರೆ. ಸಿಕ್ಕಾಪಟ್ಟೆ, ಅಂಕಿ ಅಂಶ, ಮಾಹಿತಿಗಳನ್ನು ಸೇರಿಸಿ ಬರೆಯುವ ನನ್ನ ವಿಚಿತ್ರ ಶೈಲಿಗೆ, ಚಾಳಿಗೆ ಅವರು ಏನು ಕಾಮೆಂಟು ಮಾಡ್ತಾರೋ ಎಂಬ ಆತಂಕದಲ್ಲಿದ್ದೇನೆ.
ಉಳಿದಂತೆ ಪುಸ್ತಕದ ಬಿಡುಗಡೆ ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸ್ಥಳ ಯಾವುದು ಎಂದು ನಿಗದಿಯಾಗಿಲ್ಲ. ಹಿರಿಯ ಮಿತ್ರರಾದ ಜಿ.ಎನ್. ಮೋಹನ್ ಹಾಗೂ ಇತರರ ಜೊತೆ ಚರ್ಚಿಸಿ, ಸ್ಥಳ ನಿಗದಿಗೆ ಒದ್ದಾಡುತ್ತಿದ್ದೇನೆ. ಆದರೆ ಸಿಗುತ್ತಿಲ್ಲ. ಇನ್ನು ಎರಡು ಮೂರು ದಿನದಲ್ಲಿ ಹೆಚ್ಚಿನ ವಿವರ ತಿಳಿಸುತ್ತೇನೆ. ಪುಸ್ತಕದ ಬಿಡುಗಡೆಗೆ ಖಂಡಿತಾ ಬರಬೇಕು.

ಪುಸ್ತಕದ ಹೂರಣ, ಪೂರಕ ವಿಡಿಯೋ, ಫೊಟೋಗಳ ವಿವರಗಳನ್ನು ಖಂಡಿತಾ  ಶೀಘ್ರದಲ್ಲಿ ನಿಮ್ಮ ಮುಂದೆ ಇಡುತ್ತೇನೆ.

jallianwala-bagh